ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶುಕ್ರವಾರ ೧೦ ತಿಂಗಳ ಮಗು ಸೇರಿದಂತೆ ಮತ್ತೆ ೯ ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೬೪ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಏಳು ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ . ಅಷ್ಟಕ್ಕೂ ಯಾವ ಯಾವ ಕೇಸ್‌ಗಳು ದಾಖಲಾಗಿದೆ  ಇದರ  ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

 

ದಕ್ಷಿಣ ಕನ್ನಡ ಜಿಲ್ಲೆಯ ೧೦ ತಿಂಗಳ ಗಂಡುಮಗುವನ್ನು ಕೆಲವು ದಿನಗಳ ಹಿಂದೆ ಪೋಷಕರು ಕೇರಳಕ್ಕೆ ಕರೆದುಕೊಂಡು ಹೋಗಿದ್ದರು. ಕೇರಳದಿಂದಲೇ ಮಗುವಿಗೆ ಸೋಂಕು ತಗುಲಿದೆಯಾ? ಅಥವಾ ಬೇರಾವುದಾದರೂ ಹಿನ್ನೆಲೆ ಇದೆಯಾ? ಎಂಬುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಹಸುಗೂಸು ಕೋರೊನಾ ಸೋಂಕಿನಿಂದ ಬಳಲುತ್ತಿದೆ. ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದ ಈ ಮಗುವನ್ನು ೨೩ ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಗಂಟಲಿನ ದ್ರವ ಪರೀಕ್ಷೆ ವರದಿ ಬಂದಿದ್ದು , ಮಗುವಿಗೆ ಕೋರೊನಾ ಸೋಂಕು ಇರುವುದು ದೃಢಪಟ್ಟಿದೆ.

 

ಇನ್ನು ಕೊಲಂಬೋದಿಂದ ವಾಪಸಾಗಿದ್ದ ಬೆಂಗಳೂರಿನ ೨೦ ವರ್ಷದ ಯುವಕನಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಮಾರ್ಚ್ ೧೫ ರಂದು ಈತ ಭಾರತಕ್ಕೆ ವಾಪಸಾಗಿದ್ದ. ನಂತರ ಈತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇರಿಸಲಾಗಿದೆ.

 

ಬೆಂಗಳೂರಿನ ೨೫ ವರ್ಷದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಲಂಡನ್ಗೆ ತೆರಳಿದ್ದ ಈ ಯುವತಿ ಮಾರ್ಚ್ ೧೮ರಂದು ಬೆಂಗಳೂರಿಗೆ ಮರಳಿದ್ದರು. ೩೫ ವರ್ಷದ ಬೆಂಗಳೂರಿನ ಇನ್ನೋರ್ವ ವ್ಯಕ್ತಿಗೂ ಸೋಂಕು ತಗುಲಿರುವುದು ಖಚಿತವಾಗಿದೆ. ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೂ ಕೊರೋನಾ ಸೋಂಕು ದೃಢಪಟ್ಟಿದೆ.

 

ಉತ್ತರ ಕನ್ನಡ ಜಿಲ್ಲೆಯ ೨೨ ವರ್ಷದ ಯುವತಿ ಕೆಲವು ದಿನಗಳ ಹಿಂದೆ ದುಬೈನಿಂದ ಆಗಮಿಸಿದ್ದರು. ಅವರಿಗೆ ಕೊರೋನಾ ಸೋಂಕು ಖಚಿತವಾಗಿದ್ದು, ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇರಿಸಲಾಗಿದೆ.

ಕೊರೋನಾಗೆ ರಾಜ್ಯದಲ್ಲಿ ಮತ್ತೊಂದು ಬಲಿ

 

ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಸೋಂಕಿನಿಂದ ಮೃತಪಟ್ಟಿರುವ ೬೦ ವರ್ಷದ ಧರ್ಮ ಪ್ರಚಾರಕರೋರ್ವರು ಮಾರ್ಚ್ ೧೩ರಂದು ರೈಲಿನಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಇವರು ತುಮಕೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ೨೪ ಜನರು ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದು, ೧೩ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ೮ ಜನರಲ್ಲಿ ಸೋಂಕು ಪತ್ತೆಯಾಗಿಲ್ಲ. ಉಳಿದ ಮೂವರು ಆರೋಗ್ಯ ಸಿಬ್ಬಂದಿಯಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಲಾಗಿದೆ.

మరింత సమాచారం తెలుసుకోండి: