ಬೆಂಗಳೂರು : ಮಾಜಿ ಪ್ರಧಾನಿಯೊಬ್ಬರು ಮುಖ್ಯಮಂತ್ರಿ ಮನೆ ಎದುರಿಗೆ ಪ್ರತಿಭಟನೆ ಮಾಡುತ್ತಾರಾ! ಎಂದು ಆಶ್ಚರ್ಯ ವಾದರೂ ಸಹ ನಂಬಲೇಬೇಕು. ಹೌದು, ಯಾರದು ಏಕೆ ಈ ರೀತಿ ಹೇಳಿದ್ದಾರೆ, ಯಾವ ಕಾರಣಕ್ಕಾಗಿ ಎಂದು ನಾವ್ ಹೇಳ್ತೀವಿ ನೋಡಿ. 


ಜೆಡಿಎಸ್‌ ಕಾರ್ಯಕರ್ತನ ಬಾಯಲ್ಲಿ ಪಿಸ್ತೂಲ್‌ ಇಟ್ಟು ದೌರ್ಜನ್ಯ ಎಸಗಿರುವ ಯಾದಗಿರಿ ನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಸಿಎಂ ಯಡಿಯೂರಪ್ಪ ನಿವಾಸದ ಎದುರು ನ.15 ರಂದು ಪ್ರತಿಭಟಿಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಗುಡುಗಿದ್ದಾರೆ. 
ಮಾಧ್ಯಮಗಳನ್ನು ಮಾತನಾಡಿದ ಅವರು, ''ಗುರುಮಿಟಕಲ್‌ ಕ್ಷೇತ್ರದ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಮಾರ್ಕಂಡಪ್ಪ ಮಾನೇಗಾರ್‌ ಅವರನ್ನು ಅಮಾನವೀಯವಾಗಿ ಥಳಿಸಿರುವ ಸಬ್‌ಇನ್‌ಸ್ಪೆಕ್ಟರ್‌ ಬಾಪುಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಡಿಯೂರಪ್ಪಗೆ ಪತ್ರ ಬರೆದಿದ್ದೇನೆ. ಡಿಐಜಿಗೂ ಕರೆ ಮಾಡಿ ವಿಷಯ ತಿಳಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಪ್ರತಿಭಟನೆ ವೇಳೆ ಬೇಕಾದರೆ ನನ್ನನ್ನು ಬಂಧಿಸಲಿ,'' ಎಂದು ನುಡಿದಿದ್ದಾರೆ.


ಶರಣಗೌಡ ಕಂದಕೂರ್‌ ಮೇಲಿನ ಕೋಪಕ್ಕೆ ಸಬ್‌ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಂಥ ದ್ವೇಷದ ಆಡಳಿತ ಸರಿಯಲ್ಲ. ಯಡಿಯೂರಪ್ಪನವರು ಈಗ ಯಾವ ಮನೆಯಲ್ಲಿಇರುತ್ತಾರೆ ಎಂಬುದು ಗೊತ್ತಿಲ್ಲ. ಎಲ್ಲೇ ಇರಲಿ ನಾನಂತೂ ಪ್ರತಿಭಟನೆ ನಡೆಸುತ್ತೇನೆ,'' ಎಂದು ಎಚ್ಚರಿಸಿದ್ದಾರೆ. 


ಸಕ್ಕರೆ ನಾಡು ಮಂಡ್ಯ ಜಿಲ್ಲೆ ಕೆ.ಆರ್‌. ಪೇಟೆ ತಾಲೂಕಿನ ಕಲ್ಲುಕ್ವಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ ಆದೇಶವನ್ನು ಸರಕಾರ ಪಾಲಿಸುತ್ತಿಲ್ಲ. ಅಲ್ಲಿನ ಜಿಲ್ಲಾಧಿಕಾರಿಗಳ ಜತೆಗೆ ಮಾತನಾಡಿದರೆ ಮುಖ್ಯಮಂತ್ರಿಗಳಿಂದ ಸೂಚನೆ ಬರಲಿ ಎನ್ನುತ್ತಾರೆ. ಏನ್ರೀ.. ಈ ರಾಜ್ಯದಲ್ಲಿ ನ್ಯಾಯಾಲಯದ ಆದೇಶ ಪಾಲಿಸುವುದಕ್ಕೂ ಮುಖ್ಯಮಂತ್ರಿ ಆದೇಶ ಬೇಕಾ? ದ್ವೇಷದ ರಾಜಕಾರಣ ಮಾಡುವುದಿಲ್ಲವೆಂದು ಯಾವ ಪುರುಷಾರ್ಥಕ್ಕೆ ಹೇಳಿಕೆ ನೀಡುತ್ತೀರಿ? ಅಧಿಕಾರದಲ್ಲಿ ಮೊಳೆ ಹೊಡೆದುಕೊಂಡು ಕುಳಿತುಕೊಳ್ಳುವುದಕ್ಕೆ ಯಾವ ರಾಜಕಾರಣಿಗೂ ಸಾಧ್ಯವಿಲ್ಲ,''ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಒಂದು ಕಡೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರೆ ಮತ್ತೊಂದು ಕಡೇ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಕರೆ ಮಾಡಿ ಮತ್ತೆ ದೋಸ್ತಿ ಸರ್ಕಾರ ರಚನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


మరింత సమాచారం తెలుసుకోండి: