ರಿಯಲ್ ಸ್ಟಾರ್ ಉಪೇಂದ್ರ ಅವರು ಕಾಶಿನಾಥ್ ಅವರ ಶಿಷ್ಯ. ಅವರನ್ನು ಪೂರ್ಣವಾಗಿ ಗುರುಗಳಾಗಿ ಒಪ್ಪಿಕೊಂಡು ಸಿನಿಮಾ ಕರಿಯರ್ ಶುರುಮಾಡಿದ್ದರು. ಇದೀಗ ಕಾಶಿನಾಥ್ ಇಲ್ಲದೆ ಇರಬಹುದು ಆದರೆ ಅವರ ಮಗ ಇದ್ದಾರಲ್ಲವೇ, ಅವರ ಹೊಸ ಚಿತ್ರ  ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರಕ್ಕೆ ಹೀರೋ ಎಂದು ಈ ಹಿಂದೆ ಹೇಳಲಾಗಿತ್ತು.


 ಈ ಚಿತ್ರದ ಟೈಟಲ್‌ ಟೀಸರ್‌ಗೆ ಇದೀಗ ಚಾಲನೆ ಸಿಕ್ಕಿದೆ. ಉಪೇಂದ್ರ ಅವರು ಚಿತ್ರದ ಟೈಟಲ್‌ ಟೀಸರ್‌ಗೆ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಚಿತ್ರವನ್ನು ಕಿರಣ್‌ ಸೂರ್ಯ ನಿರ್ದೇಶನ ಮಾಡುತ್ತಿದ್ದು, ಮೊದಲ ಬಾರಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದಕ್ಕೂ ಮುಂಚೆ “ದೇವಕಿ’ ಚಿತ್ರಕ್ಕೆ ಕೋ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದ ಕಿರಣ್‌ ಸೂರ್ಯ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಅಭಿಮನ್ಯು ಕಾಶಿನಾಥ್‌ ಅವರ ಚಿತ್ರವನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ. ಸುದರ್ಶನ ಆರ್ಟ್ಸ್ ಬ್ಯಾನರ್‌ನಲ್ಲಿ ನಂದೀಶ್‌ ಎಂ.ಸಿ.ಗೌಡ ಮತ್ತು ಜಿತಿನ್‌ ಜಿ. ಪಟೇಲ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರಿಗೂ ಇದು ಮೊದಲ ನಿರ್ಮಾಣದ ಚಿತ್ರ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಬಗ್ಗೆ ಹೇಳುವ ಕಿರಣ್‌ ಸೂರ್ಯ, “ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ.


ಈ ಚಿತ್ರದ ಆರಂಭದಿಂದ ಅಂತ್ಯದವರೆಗೂ ಹೊಸ ಬಗೆಯ ಅಂಶಗಳೊಂದಿಗೆ ಕುತೂಹಲ ಕೆರಳಿಸುತ್ತ ಹೋಗುತ್ತದೆ. ಈಗಾಗಲೇ ಸಾಕಷ್ಟು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಬಂದಿವೆಯಾದರೂ, ಇಲ್ಲಿ ಹೊಸ ಅಂಶಗಳು ನೋಡುಗರನ್ನು ಸೆಳೆಯಲಿವೆ’ ಎಂಬ ಗ್ಯಾರಂಟಿ ಕೊಡುವ ಕಿರಣ್‌ ಸೂರ್ಯ, ಚಿತ್ರದ ನಾಯಕಿಯಾಗಿ ಸ್ಫೂರ್ತಿ ಉಡಿಮನೆ ಎಂಬ ಯುವ ಪ್ರತಿಭೆ ಆಯ್ಕೆಯಾಗಿದೆ. ಇನ್ನು ಚಿತ್ರದ ಪಾತ್ರಕ್ಕಾಗಿ ಅಭಿಮನ್ಯು ಕಾಶಿನಾಥ್‌ ಅವರು ವಿಶೇಷವಾಗಿ ತಯಾರಾಗುತ್ತಿದ್ದಾರೆ. ಅವರ ಪಾತ್ರಕ್ಕೆ ದಾಡಿ, ಹೇರ್‌ಸ್ಟೈಲ್‌ ಎಲ್ಲವೂ ಹೊಸರೀತಿಯಲ್ಲಿರಲಿದೆ.


ಸದ್ಯಕ್ಕೆ ಬಿಡುಗಡೆಯಾಗಿರುವ ಟೈಟಲ್‌ ಟೀಸರ್‌ಗೆ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಹೆಚ್ಚಿದೆ. ಮಡಿಕೇರಿ, ಮೈಸೂರುಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಚಿತ್ರಕ್ಕೆ ಗೌತಮ್‌ ಮನು ಛಾಯಾಗ್ರಹಣವಿದೆ. ಗಣೇಶ್‌ ನಾರಾಯಣ್‌ ಸಂಗೀತವಿದೆ. ಮುಂದಿನ ತಿಂಗಳಲ್ಲಿ ಚಿತ್ರ ಪ್ರಾರಂಭವಾಗಲಿದೆ.


మరింత సమాచారం తెలుసుకోండి: