ಮಧ್ಯಮ ವರ್ಗದ ಜನರ ಬದುಕು ಬವಣೆಯೇ ಸಾರ್ವಜನಿಕರಿಗೆ ಸುವರ್ಣಾವಕಾಶ
 
ಚಿತ್ರ ವಿಮರ್ಶೆ
ಚಿತ್ರ: ಸಾರ್ವಜನಿಕರಿಗೆ ಸುವರ್ಣಾವಕಾಶ
ನಟ: ರಿಷಿ 
ನಟಿ: ಧನ್ಯಾ
ರೇಟಿಂಗ್: ***
 
ಸ್ಟಾರ್ ನಟರ ಚಿತ್ರಗಳಲ್ಲಿ ಪ್ರೀತಿ, ರೌಡಿಸಂ, ದೊಡ್ಡ ದೊಡ್ಡ ಕಥೆ ನೋಡುತ್ತೇವೆ. ಮಾದ್ಯಮ ವರ್ಗದ ಬದುಕು ಬವಣೆಗಳನ್ನು, ಅವರ ಕುಟುಂಬದಲ್ಲಿ ಬರುವಂಥ ಸಣ್ಣ ಸಣ್ಣ ಸಮಸ್ಯೆಗಳನ್ನು ಬೆನ್ನತ್ತಿ ಹೊರಡುವ ಹೀರೋ. ಅವುಗಳಿಂದ ದಾಟಿಕೊಳ್ಳಲು ಅವನು ಏನೆಲ್ಲ ಸರ್ಕಸ್‌ ಮಾಡುತ್ತಾನೆ ಎಂಬುದೇ ಸಾರ್ವಜನಿಕರಿಗೆ ಸುವರ್ಣಾವಕಾಶ. 
   
ಸಾಮಾನ್ಯ ಜನರನ್ನು ನಂಬಿಸೋದು ಮತ್ತು ಮೋಸ ಮಾಡೋದು ತುಂಬಾ ಸುಲಭ. ಈ ಸಾಲಿಗೆ ಹೊಸ ಸೇರ್ಪಡೆ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರ. ಹಾಗಂತ ಈ ಸಿನಿಮಾದಲ್ಲಿ ಅದೇ ಕೇಂದ್ರ ಕಥಾವಸ್ತುವಲ್ಲ. ಅಲ್ಲೊಂದು ಕ್ಯೂಟ್‌ ಲವ್‌ಸ್ಟೋರಿ ಇದೆ. ಕಾಮಿಡಿ ಕಮಾಲ್‌ ಮಾಡಿದೆ. ಮಕ್ಕಳು ಮತ್ತು ಪಾಲಕರ ನಡುವಿನ ನಂಟಿದೆ. ಒಂದು ಇನ್ನೊಂದಾಗುವ ಅಚ್ಚರಿಗಳಿವೆ. ಇವೆಲ್ಲವನ್ನೂ ಒಟ್ಟಾಗಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಅನೂಪ್‌ ರಾಮಸ್ವಾಮಿ ಕಶ್ಯಪ್‌. ಮ್ಯಾಜಿಕ್‌ ಮಾಡುವಂಥ ದೃಶ್ಯಗಳನ್ನು ಯೋಚಿಸದೇ, ನೈಜ ಬದುಕಿನಲ್ಲಿ ನಡೆಯುವ ಸನ್ನಿವೇಶಗಳನ್ನು ಚಿತ್ರಕಥೆಯಲ್ಲಿ ಬಳಸಿಕೊಂಡಿದ್ದಾರೆ.
 
ವೇದಾ (ರಿಷಿ) ಮತ್ತು ಜಾನು (ಧನ್ಯಾ) ಪ್ರೇಮಿಗಳು. ಇಬ್ಬರದ್ದೂ ಒಂದೊಂದು ರೀತಿಯ ಪ್ರಾಬ್ಲಂ. ಸ್ಟಾರ್‌ ನಟರ ಸಿನಿಮಾಗಳಲ್ಲಿ ಬರುವಂಥ ಸಂಗತಿಗಳು ಅವಾಗದ್ದಿದ್ದರೂ, ಮಧ್ಯಮ ವರ್ಗದ ಕುಟುಂಬದಲ್ಲಿ ಬರುವಂಥ ಸಣ್ಣ ಸಣ್ಣ ಸಮಸ್ಯೆಗಳನ್ನು ಬೆನ್ನತ್ತಿ ಹೊರಡುವ ವೇದಾ. ಅವುಗಳಿಂದ ದಾಟಿಕೊಳ್ಳಲು ಅವನು ಏನೆಲ್ಲ ಸರ್ಕಸ್‌ ಮಾಡುತ್ತಾನೆ. ಆ ಘಟನೆಗಳೇ ಅವನ ಕನಸನ್ನು ಸಾಕಾರಗೊಳಿಸುತ್ತಾ ಎನ್ನುವುದು ಸಿನಿಮಾ. ತನ್ನ ಕನಸನ್ನು ನನಸಾಗಿಸಿಕೊಳ್ಳಲು ಅವನು ಸಾರ್ವಜನಿಕರಿಗೆ ಕೊಡುವ ಸುವರ್ಣಾವಕಾಶ ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ.
 
 ದತ್ತಣ್ಣ ನೋಡುಗರಲ್ಲಿ ಮತ್ತಷ್ಟು ಜೀವನ ಪ್ರೀತಿ ಹುಟ್ಟಿಸಿದರೆ, ಮಿತ್ರಾ ನಗಿಸುತ್ತಾರೆ. ರಂಗಾಯಣ ರಘು, ಶಾಲಿನಿ ಇಷ್ಟವಾಗುತ್ತಾರೆ.
ಸಿನಿಮಾದ ಮೊದಲರ್ಧದಲ್ಲಿ ಕಥೆ ಏನಿದೆ ಅಂತ ಅನಿಸಿದರೂ, ದ್ವಿತೀಯಾರ್ಧದ ಸಿನಿಮಾ ಮುಗಿಯುವ ಹೊತ್ತಿಗೆ ಆ ದೃಶ್ಯಗಳು ಬೇಕಿತ್ತು ಅನಿಸುತ್ತದೆ. ಹಾಗಾಗಿ ಕಾಯುವುದು ಅನಿವಾರ‍್ಯ. ಹಾಡುಗಳಿಲ್ಲದೇ ಇದ್ದರೂ, ನಡೆದೀತು ಎಂಬ ಭಾವನೆ ಮೂಡುವಂತೆ ಅವುಗಳು ಸ್ಥಳವನ್ನು ಆಕ್ರಮಿಸಿಕೊಂಡಿದೆ. ಒಟ್ಟಿನಲ್ಲಿ ವಾರಾತ್ಯಂಕ್ಕೆ ಒಳ್ಳೆ ಮನರಂಜನೆ ಕೊಡುತ್ತದೆ.

మరింత సమాచారం తెలుసుకోండి: