ಬೆಂಗಳೂರು: ಶುಕ್ರವಾರವಷ್ಟೇ ತೆಲುಗಿನಲ್ಲಿ ‘ಭೀಷ್ಮ’ ಸಿನಿಮಾ ಬಿಡುಗಡೆ ಆಗಿದೆ. ನಿತಿನ್ ನಾಯಕತ್ವದ ಈ ಚಿತ್ರದಲ್ಲಿ ಕನ್ನಡತಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಚಿತ್ರಕ್ಕೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸುತ್ತಿದೆ.  ಹೀಗಿರುವಾಗಲೇ ರಶ್ಮಿಕಾ ಮುಂದಿನ ಸಿನಿಮಾದ ಬಗ್ಗೆ ಟಾಲಿವುಡ್​ನಲ್ಲಿ ಟಾಕ್ ಶುರುವಾಗಿದ್ದು, ಸದ್ದಿಲ್ಲದೆ ಎನ್​.ಟಿ.ಆರ್ ​ಗೆ ನಾಯಕಿಯಾಗುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ. 
 
ಪ್ರಸ್ತುತ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಟಪುರಂಲೋ’ ಚಿತ್ರದ ಗೆಲುವಿನ ಖುಷಿಯಲ್ಲಿರುವ ಟಾಲಿವುಡ್​ ನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ‘ಅರವಿಂದ ಸಮೇತ’ ಚಿತ್ರದ ಬಳಿಕ ಎರಡನೇ ಬಾರಿ ಜೂ. ಎನ್​.ಟಿ.ಆರ್ ಜತೆ ಕೈ ಜೋಡಿಸಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಆ ಚಿತ್ರದ ಶೂಟಿಂಗ್ ಮೇನಲ್ಲಿ ಆರಂಭವಾಗಲಿದ್ದು, ನಾಯಕಿ ವಿಚಾರವಾಗಿ ಸಮಂತಾ, ಪೂಜಾ ಹೆಗಡೆ ಸೇರಿ ಹಲವು ನಟಿಯರ ಹೆಸರುಗಳು ಕೇಳಿಬಂದಿದ್ದವು. ಈಗ ರಶ್ಮಿಕಾ ಆಯ್ಕೆ ಅಂತಿಮ ಎಂದೇ ಹೇಳಲಾಗುತ್ತಿದೆ. ಕುತೂಹಲಕಾರಿ ವಿಚಾರ ಏನೆಂದರೆ, ‘ಭೀಷ್ಮ’ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮೊದಲು ತ್ರಿವಿಕ್ರಮ್ ನಿರ್ದೇಶನದ ಚಿತ್ರಕ್ಕೆ ರಶ್ಮಿಕಾ ಸಹಿ ಮಾಡಿದ್ದರಂತೆ ಎಂಬ ಮಾತೂ ಕೇಳಿಬರುತ್ತಿದ್ದು ಎನ್.ಟಿ.ಆರ್ ಜೊತೆ ನಟಿಸಿದ್ದೇ ಆದರೆ ರಶ್ಮಿಕಾ ಹೆಸರು ಮತ್ತಷ್ಟು ಮಗದಷ್ಟು ಬೆಳೆಯೋದು ಮಾತ್ರ ಖಚಿತವಾಗಿದೆ. 
 
ಹಾಗಾದರೆ ಈ ವಿಚಾರದ ಬಗ್ಗೆ ರಶ್ಮಿಕಾ ಮೊದಲೇ ಏಕೆ ಮಾತನಾಡಲಿಲ್ಲ? ಹೌದು. ಈ ಮೊದಲು ಒಪ್ಪಿಕೊಂಡ ಸಿನಿಮಾಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಒಪ್ಪಿಕೊಂಡ ಕೆಲ ಪ್ರಾಜೆಕ್ಟ್ ​ಗಳಿಂದ ಹೊರಬರಬೇಕಾಯಿತು. ಹಾಗಾಗಿ ಎನ್ ​ಟಿ ಆರ್ ಜತೆಗಿನ ಸಿನಿಮಾ ವಿಚಾರ ಗೌಪ್ಯವಾಗಿಟ್ಟಿದ್ದರು ಎನ್ನಲಾಗುತ್ತಿದೆ. ಸದ್ಯ ಕನ್ನಡದಲ್ಲಿ ಧ್ರುವ ಸರ್ಜಾ ಜತೆಗೆ ‘ಪೊಗರು’ ಮತ್ತು ಕಾಲಿವುಡ್​ ನಲ್ಲಿ ಕಾರ್ತಿ ಜತೆಗೆ ‘ಸುಲ್ತಾನ್’ ಸಿನಿಮಾಗಳಲ್ಲಿ ರಶ್ಮಿಕ ಮಂದಣ್ಣ ಫುಲ್ ಬ್ಯೂಸಿ ಆಗಿದ್ದು ಟಾಲಿವುಡ್ ನ ಖ್ಯಾತ ನಟ ಎನ್ ಟಿ ಆರ್ ಜೊತೆ ಒಮ್ಮೆ ನಟಿಸಿದ್ದೇ ಆದರೆ ರಶ್ಮಿಕಾ ಖ್ಯಾತಿ ನಿರೀಕ್ಷೆಗೂ ಮೀರಿ ಬೆಳೆಯೋದರಲ್ಲಿ ಅನುಮಾನವೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

మరింత సమాచారం తెలుసుకోండి: