ಇಂದಿನ ಕೊರೋನಾ ಸಂಕಷ್ಟದಲ್ಲಿ ಅನೇಕ ಕಲಾವಿದರು ಹಾಗೂ ಖ್ಯಾತನಾಮರು ನಿರ್ಗತಿಕರಿಗೆ ಸಹಾಯ ಹಸ್ತವನ್ನು ಚಾಚುತ್ತಲೇ ಇರುತ್ತಾರೆ. ಇದರ ಜೊತೆಗೆ ಅನೇಕ ಮಂದಿ ಸೆಲಬ್ರೆಟಿಗಳು  ಕೊರೋನಾ ಕಾಲದಲ್ಲಿ ಸರ್ಕಾರಕ್ಕೆ ನೆರವಾಗುವ ದೃಷ್ಠಿಯಿಂದ ಸಾಕಷ್ಟು ಹಣವನ್ನು ಧೇಣಿಗೆಯಾಗಿ ನೀಡಿದ್ದಾರೆ. ಇವೆಲ್ಲವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಿ ಹೆಸರನ್ನು ಪಡೆದುಕೊಂಡರೆ ಮತ್ತೆ ಕೆಲವರು ಸೈಲೆಂಟಾಗಿ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ.  ಅಂತಹ ಒಂದು ಕಾರ್ಯದಲ್ಲಿ ಕಿಚ್ಚ ಸುದೀಪ್ ಕೂಡ  ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  

 

ಹೌದು ಕಿಚ್ಚ ಸುದೀಪ್‌ ಚಾರಿಟಬಲ್‌ ಸೊಸೈಟಿಯು ಸಾಮಾಜಿಕ ಕೈಂಕರ್ಯ ಮಾಡುತ್ತಿದ್ದು. ಇಲ್ಲಿಯವರೆಗೆ ಅಸಹಾಯಕರಿಗೆ ಸಹಾಯ ಹಸ್ತ ಚಾಚಿದ್ದ ಚಾರಿಟಬಲ್ ಸೊಸೈಟಿ, ಈಗ ಸರ್ಕಾರಿ ಶಾಲೆಗಳನ್ನ ದತ್ತು ತೆಗೆದುಕೊಂಡು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡ್ತಿದೆ. ಮಹಾಮಾರಿ ಕರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಕಾರ್ಯಗಳಲ್ಲಿ ತೊಡಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮತ್ತೊಂದು ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.​

 

ಈ ಬಾರಿ ಕಿಚ್ಚನ ಕಣ್ಣು ಸರ್ಕಾರಿ ಶಾಲೆಗಳ ಮೇಲೆ ಬಿದ್ದಿದ್ದು, ಶಾಲೆಗಳ ಅಭಿವೃದ್ಧಿಗೆ ಸುದೀಪ್​ ಪಣ ತೊಟ್ಟಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ನಾಲ್ಕು ಸರ್ಕಾರಿ ಶಾಲೆಗಳನ್ನು ಸುದೀಪ್​ ದತ್ತು ಪಡೆದಿದ್ದಾರೆ.

 

ಕಿಚ್ಚ ಸುದೀಪ್ ಚಾರಿಟೆಬೆಲ್ ಸೊಸೈಟಿ ಮೂಲಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಮತ್ತು ಚಳ್ಳಕೆರೆ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚ ದತ್ತು ಪಡೆದಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕರ ಸಂಬಳ ಹಾಗೂ ಮಕ್ಕಳ ಸ್ಕಾಲರ್​ಶಿಪ್ ಬಿಟ್ಟು ಶಾಲೆ ಅಭಿವೃದ್ಧಿಯ ಜವಬ್ದಾರಿಯನ್ನು ಕಿಚ್ಚ ವಹಿಸಿಕೊಂಡಿದ್ದಾರೆ.

 

ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಕೆಲಸ. ಪೇಂಟಿಂಗ್​, ಶೌಚಾಲಯ ನಿರ್ಮಾಣ ಸೇರಿದಂತೆ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ತಮ್ಮ ಟ್ರಸ್ಟ್​ ಮೂಲಕ ಒದಗಿಸಲಿದ್ದಾರೆ. ಹಿರಿಯೂರು ಬಿಇಓ ಶ್ರೀ ಪಿ. ರಾಮಯ್ಯ ಹಿರಿಯೂರು ಮತ್ತು ಚಳ್ಳಕೆರೆ ಬಿಇಓ ಕೆ.ಎಸ್ . ಸುರೇಶ್ ಸಮ್ಮುಖದಲ್ಲಿ ಶಾಲಾ ದತ್ತು ಪಡೆಯಲಾಗಿದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸಲು ಶಾಲೆಗಳನ್ನು ಡಿಜಿಟಲೈಸ್​​ ಮಾಡಲು ಕಿಚ್ಚ ಮುಂದಾಗಿದ್ದಾರೆ. ಹೀಗಾಗಿ ನಾಲ್ಕು ಶಾಲೆಗಳಿಗೆ ಕಂಪ್ಯೂಟರ್ ಕೊಡಿಸಲಾಗುತ್ತಿದೆ.

 

ಮಾರ್ಚ್​ ತಿಂಗಳಲ್ಲೇ ಶಾಲೆಗಳನ್ನು ದತ್ತು ಪಡೆಯಲು ತೀರ್ಮಾನಿಸಲಾಗಿತ್ತು. ಆದರೆ, ಕರೊನಾ ಬಂದಿದ್ರಿಂದ ದತ್ತು ಪಡೆಯೋ ಕೆಲಸ ಆಗಿರಲಿಲ್ಲ. ಆಗಸ್ಟ್​ನಲ್ಲಿ ಶಾಲೆಗಳು ಪುನಾರಾಂಭ ಆಗೋ ಸಾಧ್ಯತೆ ಇರೋದ್ರಿಂದ ದತ್ತು ಪಡೆಯಲಾಗಿದೆ.

 

 

మరింత సమాచారం తెలుసుకోండి: