ಹಿರಿಯ ನಟಿ ಡಾ.ಜಯಂತಿ ಅವರಿಗೆ ಮತ್ತೊಂದು ಪ್ರಶಸ್ತಿ ಒಲಿದು ಬಂದಿದೆ. ಇದು ಬೇರೆ ಯಾವುದೂ ಅಲ್ಲ, 'ಡಾ. ರಾಜ್‌ಕುಮಾರ್‌ ಸಂಸ್ಕೃತಿ ಪ್ರಶಸ್ತಿ. ಹೌದು. ಈ ಪ್ರಶಸ್ತಿಗೆ ಪ್ರಸಕ್ತ ವರ್ಷ ಹಿರಿಯ ಚಲನಚಿತ್ರ ನಟಿ ಡಾ. ಜಯಂತಿ ಅವರನ್ನು ಆಯ್ಕೆ ಮಾಡಲಾಗಿದೆ.


ಇದೇ ತಿಂಗಳ 24 ರಂದು ಸಂಜೆ 5 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಯಂತಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಅಷ್ಟಕ್ಕೂ ಈ ಪ್ರಶಸ್ತಿಯನ್ನು ಚಿತ್ರನಟ ಶಿವರಾಜ್‌ಕುಮಾರ್‌  ಅವರು ಪ್ರದಾನ ಮಾಡಲಿದ್ದಾರೆ.


ಆಯ್ಕೆ ನಡೆದಿದ್ದು ಹೇಗೆ?:


ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್‌ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ ಹಾಗೂ ಕಸಾಪ ಪದಾಧಿಕಾರಿಗಳನ್ನು ಒಳಗೊಂಡ ಆಯ್ಕೆ ಸಮಿತಿ ಸಭೆಯಲ್ಲಿ ಜಯಂತಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಡಾ. ರಾಜ್‌ ಕುಟುಂಬವು ಕಸಾಪದಲ್ಲಿ ಐದು ಲಕ್ಷ ರೂ. ದತ್ತಿ ಠೇವಣಿ ಇರಿಸಿದ್ದು, ಇದರಿಂದ ಬರುವ ಆದಾಯದಲ್ಲಿ ಸಿನಿಮಾ ಸಂಸ್ಕೃತಿಯನ್ನು ಬೆಳೆಸಲು ಕಾರಣರಾದ ಗಣ್ಯ ಕಲಾವಿದರು, ನಿರ್ಮಾಪಕರು ಹಾಗೂ ಎಲ್ಲಾ ವಿಭಾಗದ ತಂತ್ರಜ್ಞರನ್ನು, ಸಾಹಿತಿಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯು 30 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ


మరింత సమాచారం తెలుసుకోండి: