ಬಿ. ಸಿ ಪಾಟೀಲ್  ಅಂದು ಒಂದೊಳ್ಳೆ ಶಾಸಕನಾಗಿರಲಿಲ್ಲ. ಒಂದೊಳ್ಳೆ ಪೊಲೀಸ್ ಅಧಿಕಾರಿಯು ಆಗಿರಲಿಲ್ಲ. ಆದ್ದರಿಂದ ಬಿ.ಸಿ ಪಾಟೀಲ್ ಎಂದೆಂದಿಗೂ ಅನರ್ಹ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. 
 
 ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳ ಮೂಲಕ ಗುಡುಗಿದ್ದು ಬಿ.ಸಿ ಪಾಟೀಲ್ ಒಳ್ಳೆಯ ಪೊಲೀಸ್ ಆಗಿರಲಿಲ್ಲ ಹಾಗೂ ಒಳ್ಳೆಯ ಶಾಸಕನೂ ಅಲ್ಲ ಎಂದಿದ್ದಾರೆ. ಬಿ.ಸಿ ಪಾಟೀಲ್ ಒಳ್ಳೆ ಪೊಲೀಸು ಆಗಿರಲಿಲ್ಲ, ಒಳ್ಳೆ ಶಾಸಕನೂ ಆಗಲಿಲ್ಲ. ಮತ ನೀಡಿ ಗೆಲ್ಲಿಸಿದ ಜನರನ್ನು ಕೇಳದೆ ಬಿಜೆಪಿ ಬಳಿ ಹಣ ತಗೊಂಡು ಪಕ್ಷಾಂತರ ಮಾಡಿ, ಈಗ ಅನರ್ಹ ಎಂಬ ಕಳಂಕ ಹೊತ್ತುಕೊಂಡು ತಿರುಗುತ್ತಿದ್ದಾರೆ. ಮತ್ತೆ ಯಾವ ಮುಖ ಹೊತ್ತುಕೊಂಡು ಜನರ ಬಳಿ ಮತ ನೀಡಿ ಎಂದು ಕೇಳುತ್ತಾರೋ? ಎಂದು ಟ್ವೀಟಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
 
ಬಿ. ಸಿ ಪಾಟೀಲ್ ಮಾನನಷ್ಟ ಮೊಕದ್ದಮೆ ಹೂಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ದುಡ್ಡು ತಗೊಂಡು ಬಿಜೆಪಿ ಸೇರಿದ್ದೀನಿ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡ್ತೀನಿ ಎಂದು ಬಿ.ಸಿ ಪಾಟೀಲ್ ಹೇಳುತ್ತಿದ್ದಾರಂತೆ. ಮಾನವಿದ್ದರೆ ಅಲ್ವೇ ಮೊಕದ್ದಮೆ ಹೂಡುವುದು? ತಾವಾಗಿಯೇ ಬಟ್ಟೆ ಬಿಚ್ಕೊಂಡರೆ ನಾವೇನು‌ ಮಾಡೋಕ್ಕಾಗುತ್ತೆ?ಎಂದು ಕಿಡಿಕಾರಿದರು.
 
ಇದೇ ಬಿ.ಸಿ ಪಾಟೀಲ್ ತಮ್ಮ ಮತ್ತು ಯಡಿಯೂರಪ್ಪ ನಡುವಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ತಂದು ಉಗ್ರಪ್ಪನವರಿಗೆ ಕೊಟ್ಟಿರಲಿಲ್ವೇ? ಅದರಲ್ಲಿ ನಾವು ನಾಲ್ಕು ಜನ ಬರ್ತೀವಿ ಎಷ್ಟು ಕೊಡ್ತೀರ, ಏನೇನ್ ಕೊಡ್ತೀರ ಅಂತ ಕೇಳಿಲ್ಲವೇ? ಹಣ ತಗೊಂಡು ಬಿಜೆಪಿ ಸೇರಿದ್ದೀರಿ ಅನ್ನೋಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ಮಿ.ಬಿ.ಸಿ ಪಾಟೀಲ್? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
 
ಎಲ್ಲಾ ಆರೋಪಗಳನ್ನು ಹೊತ್ತಿರುವ ಬಿ. ಸಿ ಸದಾ ಕಾಲ ಅನರ್ಹರು. ಯಾವುದೇ ಕಾರಣಕ್ಕೂ ಬಿ.ಸಿ ಪಾಟೀಲ್ ಗೆಲ್ಲಬಾರದು. ಮತದಾರರು  ವಾಸ್ತವ ಅರಿತು ಯೋಗ್ಯರಿಗೆ  ಮತ ಹಾಕಬೇಕೆಂದು ತಮ್ಮ ಭಾಷಣದುದ್ಧಕ್ಕೂ ಬಿ.ಸಿ ಪಾಟೀಲ್ ವಿರುದ್ಧ ಗುಡುಗಿದರು.

మరింత సమాచారం తెలుసుకోండి: