ಮಂಗಳೂರು: ರಾಷ್ಟ್ರದಲ್ಲಿ ಶತಮಾನದ ಐತಿಹಾಸಿಕ ತೀರ್ಪು ಪ್ರಕಟಿಸಿದ ನಂತರ ಇದೀಗ ರಾಮ ಮಂದಿರ ನಿರ್ಮಾಣ ಮಾಡಲಿಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹೌದು, ಕೋಟ್ಯಾಂತರ ಹಿಂದೂಗಳ ಆರಾಧ್ಯ ಧೈವವಾದ ರಾಮನಿಗಾಗಿ ಆಕಾಶದೆತ್ತರಕ್ಕೆ ಮಂದಿರ ನಿರ್ಮಾಣ ಮಾಡಲಾಗುವುದು. 
 
ಮುಂಬರುವ ರಾಮನವಮಿ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದು ವಿಶ್ವ ಹಿಂದೂ ಪರಿಷತ್‌ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದರು. ನಗರದ ಸಂಘ ನಿಕೇತನದಲ್ಲಿ ನಡೆಯುತ್ತಿರುವ ವಿಶ್ವ ಹಿಂದು ಪರಿಷತ್‌ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಪ್ರಬಂಧ ಸಮಿತಿಯ ಸಂಯುಕ್ತ ಅಂತಾರಾಷ್ಟ್ರೀಯ ಮಟ್ಟದ ಬೈಠಕ್‌ ಸಂದರ್ಭ ಭಾನುವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ್ದಾರೆ. 
 
ರಾಮ ಮಂದಿರ ಶೀಘ್ರದಲ್ಲೇ ನಿರ್ಮಾಣವಾಗಲಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಕೇಂದ್ರ ಸರಕಾರ ರಚಿಸುವ ಟ್ರಸ್ವ್‌, ಮಂದಿರ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳಲಿದೆ. ಮುಂದಿನ ವರ್ಷದ ಏಪ್ರಿಲ್‌ 2ರಂದು ರಾಮನವಮಿ ಕಾರ್ಯಕ್ರಮ ನಡೆಯಲಿದ್ದು, ಈ ಶುಭ ಸಂದರ್ಭದಲ್ಲಿ ಕಾಮಗಾರಿ ಆರಂಭವಾದರೆ, 2024-25ರ ಸುಮಾರಿಗೆ ಮಂದಿರದ ಕಾಮಗಾರಿ ಮುಕ್ತಾಯವಾಗುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಅಯೋಧ್ಯೆಯ ರಾಮಮಂದಿರ ರಾಷ್ಟ್ರೀಯ ಮಂದಿರವಾಗಿ ರೂಪುಗೊಳ್ಳಬೇಕು.
 
ಅದಕ್ಕಾಗಿ ಎಲ್ಲರೂ ಟ್ರಸ್ಟ್‌ ಜತೆಯಲ್ಲಿ ಕೈಜೋಡಿಸಬೇಕಿದೆ. ಈ ಬಾರಿಯ ರಾಮೋತ್ಸವ ಕಾರ್ಯಕ್ರಮವನ್ನು ಪ್ರತಿ ಹಿಂದೂಗಳ ಮನೆಯಲ್ಲಿ, ಪ್ರತಿ ದೇವಸ್ಥಾನ, ಮಂದಿರಗಳಲ್ಲಿ ನಡೆಸಬೇಕು. ದೇಶದ ಎಲ್ಲ ಹಳ್ಳಿಗಳಲ್ಲಿ ರಾಮೋತ್ಸವದ ಆಚರಣೆ ಈ ಬಾರಿ ಸಾಮೂಹಿಕವಾಗಿ ಆಚರಣೆಗೊಳ್ಳಬೇಕು ಎಂದು ಅವರು ಹೇಳಿದರು.
 
ರಾಷ್ಟ್ರದಲ್ಲಿ ಜಾತಿ ತಾರತಮ್ಯ ನಿರ್ಮೂಲನೆ, ಮಹಿಳೆಯರ ಸುರಕ್ಷತೆ ಬಗ್ಗೆ ವಿಎಚ್‌ಪಿ ವಿಶೇಷ ಒತ್ತು ನೀಡಲಿದೆ. ಅಲ್ಲದೆ ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಾಗುವ ಸೂರು, ಶಿಕ್ಷಣ, ಆಹಾರ, ಆರೋಗ್ಯ ಮುಂತಾದವುಗಳ ಬಗ್ಗೆ ವಿಶೇಷ ಒತ್ತು ನೀಡಿ ಕೆಲಸ ಮಾಡಲು ಬೈಠಕ್‌ನಲ್ಲಿ ನಿರ್ಧರಿಸಲಾಗಿದೆ ಎಂದು ಅಲೋಕ್‌ ಕುಮಾರ್‌ ತಿಳಿಸಿದರು. ಪ್ರಸ್ತುತ ರಾಮ ಮಂದಿರ ನಿರ್ಮಾಣ ಮಾಡಲಿಕ್ಕೆ ಇದೀಗ ಈ ದಿನಾಂಕ ಸೂಚಿಸಿದ್ದು, ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

మరింత సమాచారం తెలుసుకోండి: