ತುಮಕೂರು: ನಾಲ್ಕು ಬಾರಿ ಪ್ರವಾಹ ಪರಿಹಾರ ಕೇಳಿದರೆ ಕೇಂದ್ರದಿಂದ ಸಹಕಾರ ಸಿಕ್ಕಿಲ್ಲ, ರಾಜ್ಯಕ್ಕೆ ವಿಶೇಷ ಅನುದಾನಗಳು ಸಿಕ್ಕಿಲ್ಲ, ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಆದ್ದರಿಂದ ಕೇಂದ್ರದಿಂದ ಹೆಚ್ಚಿನ ಅನುದಾನ ಸಹಕಾರ ನೀಡಬೇಕೆಂದು ಪ್ರಧಾನಿ ಮೋದಿಗೆ ವೇದಿಕೆಯಲ್ಲೇ ಸಿಎಂ ಯಡಿಯೂರಪ್ಪ ಆಗ್ರಹಪೂರ್ವಕ ಮನವಿ ಸಲ್ಲಿಸಿದ್ದಾರೆ. 
 
ಗಿಡಕ್ಕೆ ನೀರೆರೆಯುವ ಮೂಲಕ ಕೃಷಿ ಸಮ್ಮಾನ್ ಕಾರ್ಯಕ್ರಮವನ್ನು ನರೇಂದ್ರ ಮೋದಿ ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಿಗೆ ಮೈಸೂರು ಪೇಟ ತೊಡಿಸಿ ಸಿಎಂ ಯಡಿಯೂರಪ್ಪ ಸನ್ಮಾನಿಸಿದರು. ದೇಶದ 6 ಕೋಟಿ ರೈತರ ಬ್ಯಾಂಕ್‌ ಅಕೌಂಟ್‌ಗೆ 12 ಸಾವಿರ ಕೋಟಿ ರೂ. ಹಣವನ್ನು ಜಮೆ ಮಾಡುವ ಯೋಜನೆಗೆ ಚಾಲನೆ ನೀಡಿದರು. 6 ಕೋಟಿ ರೈತ ಕುಟುಂಬದ ಬ್ಯಾಂಕ್ ಖಾತೆಗೆ 12 ಸಾವಿರ ಕೋಟಿ ರೂ. ಹಣವನ್ನು ಈ ದಿನ ಕೇಂದ್ರ ಸರ್ಕಾರದಿಂದ ಜಮೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು. ಈ ಯೋಜನೆಯನ್ವಯ ಪ್ರತಿ ರೈತರ ಖಾತೆಗೆ 2 ಸಾವಿರ ರೂ. ಜಮೆಯಾಗುತ್ತಿದೆ. ಇದು 3ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮವಾಗಿದ್ದು, ಈಗಾಗಲೇ 2 ಕಂತು ಬಿಡುಗಣೆ ಮಾಡಲಾಗಿದೆ.
 
ಒಟ್ಟಾರೆ 6 ಸಾವಿರ ರೂ. ಪ್ರೋತ್ಸಾಹ ಧನ ಈವರೆಗೂ ರೈತರ ಖಾತೆಗೆ ಸೇರಿದಂತಾಗಿದೆ. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಹಿಂದೆ ಬಡವರು, ರೈತರಿಗೆ ಸರ್ಕಾರ ನೀಡುತ್ತಿದ್ದ ಹಣ ಸೂಕ್ತವಾಗಿ ತಲುಪುತ್ತಲೇ ಇರಲಿಲ್ಲ. ಸರ್ಕಾರ 1 ರೂ. ಕೊಟ್ಟರೆ, ರೈತರಿಗೆ ಕೇವಲ 15 ಪೈಸೆ ಸಿಗ್ತಿತ್ತು. ಇದೀಗ ನೇರವಾಗಿ ರೈತರ ಖಾತೆಗೆ ಹಣ ಜಮೆಯಾಗುತ್ತಿದೆ ಎಂದು ಹೇಳಿದರು. ರೈತರ ಖಾತೆಗೆ ಹಣ ಜಮೆ ಮಾಡುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೂ ಇಂದು ಚಾಲನೆ ಸಿಕ್ಕಿದೆ ಎಂದು ಪ್ರಧಾನಿ ನುಡಿದಿದ್ದಾರೆ. 
 
ಇದಕ್ಕೂ ಮುಂಚೆಯೇ ಬೆಂಗಳೂರಿನಿಂದ ಮೋದಿ ನೇರವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಕ್ಕಳನ್ನುದ್ದೇಶಿ ಮಾತನಾಡಿದರು. ಮಠದಲ್ಲಿ ಸುಮಾರು ಒಂದು ಗಂಟೆ ಸಮಯ ಕಳೆದರು. ಶ್ರೀಗಳು ಮೋದಿಯವರಿಗೆ ವಿಭೂತಿ ಧಾರಣೆ ಮಾಡಿದ್ದು ವಿಶೇಷವಾಗಿತ್ತು.
 
 
 

మరింత సమాచారం తెలుసుకోండి: