ಚಿತ್ರದುರ್ಗ: ಶಾಸಕ ಕುಮಟಳ್ಳಿ ಅವರೂ ಸಹ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದಾರೆ. ಕುಮಟಳ್ಳಿ ಅವರಿಗೂ ಸೂಕ್ತ ಸ್ಥಾನಮಾನ ನೀಡಬೇಕು. ಸಚಿವ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಕುಮಟಳ್ಳಿ ಅವರಿಗೆ ಅನ್ಯಾಯ ಆಗಬಾರದೆಂದು ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಒತ್ತಾಯ ಮಾಡುತ್ತೇನೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. 
 
ಸೋತವರಿಗೆ ಮಂತ್ರಿ ಸ್ಥಾನ ನೀಡಲು ಕಾನೂನು ತೊಡಕಿದೆ. ಸಿಎಂ ಜುಲೈ ವೇಳೆಗೆ ಅವರಿಗೂ ಸೂಕ್ತ ಸ್ಥಾನಮಾನ ನೀಡುವ ಭರವಸೆ ಇದೆ. 37 ಜನ ಶಾಸಕರಿದ್ದ ಜೆಡಿಎಸ್‌ ಗೆ ಸಿಎಂ ಸ್ಥಾನ ನೀಡುವಾಗ ನೈತಿಕತೆ ಇತ್ತೆ? ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಹತಾಶರಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಮಾತಾಡುತ್ತಿದ್ದಾರೆ. ನಮ್ಮಿಂದಾಗಿ ಸಿದ್ಧರಾಮಯ್ಯಗೆ ವಿಪಕ್ಷ ನಾಯಕ ಸ್ಥಾನ ಸಿಕ್ಕಿದೆ. ಸರ್ಕಾರದ ಕಾರು, ಬಂಗಲೆ ಇಲ್ಲದೆ ಯಾರದೋ ಹೆಸರಿನ ಬಂಗಲೆಯಲ್ಲಿ ವಾಸವಾಗಿದ್ದರು. ನಮ್ಮನ್ನು ಮಾಜಿ ಸಿಎಂ ಸಿದ್ಧರಾಮಯ್ಯ ನೆನೆಸಿಕೊಳ್ಳಬೇಕು. ಒಳಗೆ ಪ್ರೀತಿ ಇರುತ್ತದೆ ವಿಪಕ್ಷ ನಾಯಕರೆಂಬ ಕಾರಣಕ್ಕೆ ನಮ್ಮ ಬಗ್ಗೆ ಮಾತಾಡ್ತಾರೆ ಎಂದು ಹೇಳಿದ್ದಾರೆ. 
 
ದೇಶ ವಿರೋಧಿ ಘೋಷಣೆ ಕೂಗಿದರೆ ಕಂಡಲ್ಲಿ ಗುಂಡಿಕ್ಕುವ ಕಾನೂನು ತರಬೇಕು. ದೇಶದ ಅನ್ನ, ನೀರು, ಗಾಳಿ ಸೇವಿಸಿ ದೇಶ ವಿರೋಧಿ ಘೋಷಣೆ ಸಲ್ಲದು. ಗುಂಡಿಕ್ಕುವ ಕಾನೂನು ತರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.
 
ರಾಜ್ಯದಲ್ಲಿ ಕ್ಯಾಸಿನೋ ಆರಂಭದ ಸಂಬಂಧ ಸಚಿವ ಸಿಟಿ ರವಿ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಬಿ.ಸಿ.ಪಾಟೀಲ್, ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಕ್ರಮ ಬೇಕಿದೆ. ಪ್ರವಾಸೋದ್ಯಮ ಎಂಬುದು ಮಳೆ ಇಲ್ಲದ ಬೆಳೆ ಇದ್ದಂತೆ. ನಮ್ಮ ದೇಶದ ಅನೇಕರು ಶ್ರೀಲಂಕಾ, ಗೋವಾ, ಸಿಂಗಾಪುರಕ್ಕೆ ಹೋಗುತ್ತಾರೆ. ಕ್ಯಾಸಿನೋ ಆಡಲು ನಮ್ಮ ದುಡ್ಡು ಹೋಗುತ್ತಿದ್ದು ನಮ್ಮ ದೇಶಕ್ಕೆ ಕೊರತೆ ಆಗಲ್ವಾ? ಫುಡ್ ಟೂರಿಸಮ್ ಸೇರಿ ಇತರೆ ಹೇಳಿಕೆ ಬಿಟ್ಟು ಕ್ಯಾಸಿನೋ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ಅದೂ ಸಹ ತಪ್ಪೇನಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

మరింత సమాచారం తెలుసుకోండి: