ಇಡೀ ವಿಶ್ವ ವ್ಯಾಪ್ತಿಯಾಗಿ ಆವರಿಸಿರುವ ಕೊರೋನಾ ವೈರಸ್ ಇಡೀ ಜಗತ್ತಿಗೇ ಗಂಡಾಂತರವಾಗಿ ಪರಿಣಮಿಸಿ ಸಾಕಷ್ಟು ಜನರು ಸಾವಿಗೆ ಕಾರಣವಾಗಿದೆ ಹಾಗೂ ಸಾಕಷ್ಟು ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ, ಹಾಗಾಗಿ ಈ ವೈರಸ್ ವೇಗವಾಗಿ ಹರಡದಂತೆ ತಪ್ಪಿಸಲು ಲಾಕ್ ಡೌನ್ ಅನ್ನು ಘೋಷಣೆಯನ್ನು ಕೂಡ ಮಾಡಲಾಗಿದೆ ಇದರಿಂದ ಸಾಕಷ್ಟು ಜನರಿಗೆ ತೊಂದರೆಯ್ನು ಉಂಟು ಮಾಡಿದರೆ ಇನ್ನೂ ಕೆಲವರಿಗೆ ಈ ಕೊರೋನಾ ವೈರಸ್ ವರವಾಗಿ ಪರಿಣಮಿದೆ ಅದು ಹೇಗೆ ಅಂತೀರ ಈ ಸ್ಟೋರಿ ಓದಿ.

ದೇಶದ ಜೈಲುಗಳು ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಕೈದಿಗಳಿಂದ ತುಂಬಿವೆ ಎನ್ನುವುದು ಗೊತ್ತಿರುವ ಸಂಗತಿಯೇ ಆಗಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆಗಾಗ ಕೇಳಿಬರುತ್ತಲೇ ಇರುತ್ತದೆ. ವಿಚಾರಣೆ ವಿಳಂಬವಾಗುವ ಕಾರಣ ವಿಚಾರಣಾಧೀನ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜೈಲುಗಳಲ್ಲಿ ಇರಬೇಕಾಗಿದೆ. ಇನ್ನು ಗಂಭೀರ ಅಪರಾಧಗಳನ್ನು ಎಸಗಿದವರಿಗಿಂತ ಸಣ್ಣಪುಟ್ಟ ಕೃತ್ಯಗಳಲ್ಲಿ ಜೈಲುಪಾಲಾದವರ ಸಂಖ್ಯೆ ದೊಡ್ಡದಿದೆ. ಇಂಥವರಿಗೀಗ ಕರೊನಾ ಶುಭ ಸುದ್ದಿ ನೀಡಿದೆ.

 

ಬ್ಯಾರಕ್‌ಗಳಲ್ಲಿ ಕೈದಿಗಳನ್ನು ಗುಂಪುಗುಂಪಾಗಿ ಇರಿಸುವುದರಿಂದ ಕರೊನಾ ಹರಡುವ ಸಾಧ್ಯತೆಯನ್ನು ತೆಗೆದು ಹಾಕಲಾರದು. ಹೊಸದಾಗಿ ಬಂದವರನ್ನು ಎಷ್ಟೇ ತಪಾಸಣೆಗೆ ಒಳಪಡಿಸಿದರೂ ಸೋಂಕು ಹರಡುವುದಿಲ್ಲ ಎಂದು ಖಚಿತವಾಗಿ ಹೇಳುವಂತಿಲ್ಲ. ಈ ಕಾರಣಗಳಿಗಾಗಿ ಜೈಲಿನ ’ಕೈದಿ ದಟ್ಟಣೆ’ ಕಡಿಮೆ ಮಾಡುವ ಚಿಂತನೆ ನಡೆದಿದೆ.

 

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ 2000 ಕೈದಿಗಳನ್ನು ಇರಿಸಬಹುದು. ಆದರೆ, ಇಲ್ಲಿರುವ ಕೈದಿಗಳ ಸಂಖ್ಯೆ 4500ಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ಕೈದಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ.

ಮುಖ್ಯವಾಗಿ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇವರಲ್ಲಿ ಸಣ್ಣಪುಟ್ಟ ಕಳ್ಳತನ, ಸುಲಿಗೆ, ದರೋಡೆ, ಗಮನ ಬೇರೆಡೆ ಸೆಳೆದು ಕಳ್ಳತನ ಮೊದಲಾದ ಪ್ರಕರಣಗಳಲ್ಲಿ ಜೈಲು ಸೇರಿದವರನ್ನು ಬಿಡುಗಡೆ ಮಾಡಲಾಗುತ್ತಿದೆ.

 

ವಿಚಾರಣಾಧೀನಕೈದಿಗಳ ಮಾಹಿತಿಯನ್ನು ಹಿಡಿದು ನಗರದ 80ಕ್ಕೂ ಅಧಿಕ ಠಾಣೆಗಳ ಪೊಲೀಸರು ಜೈಲಿಗೆ ಭೇಟಿ ನೀಡಿದ್ದಾರೆ. ಈ ಮಾಹಿತಿ ಅನುಗುಣವಾಗಿ 500ಕ್ಕೂ ಅಧಿಕ ಜನರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

ಈ ಮೂಲಕ ಇಡೀ ಜಗತ್ತಿಗೆ ಯಮನಾಗಿ ಕಾಣಿಸುತ್ತಿರುವ ಕರೋನಾ ವೈರಸ್ ಜೈಲಿನಲ್ಲಿರುವ ಕೈದಿಗಳಿಗೆ ಆಪದ್ಭಾಂದವನಾಗಿ ಕಾಣಿಸುತ್ತಿದೆ. ಆದರೆ ಕೈದಿಗಳು ಹೊರ ಬಂದ ನಂತರ ಹಳೇ ಕಸುಬನ್ನು ಮುಂದುವರಿಸದೆ ಹೊಸ ಜೀವನವನ್ನು ಮಾಡಬೇಕಷ್ಟೆ.

మరింత సమాచారం తెలుసుకోండి: