ಬಾಗಲಕೋಟೆ: ಮುಖ್ಯಮಂತ್ರಿಗಳ ತಂತಿ ಮೇಲಿನ ನಡಿಗೆಯ ಹೇಳಿಕೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಹೇಳಿಗೆಕೆ ಪಕ್ಷಾತೀತವಾಗಿ ಸಹಾನುಭೂತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಂತಿ ನಡಿಗೆಯಲ್ಲಿ ತಾನು ಯಡಿಯೂರಪ್ಪ ಪರ ನಿಲ್ಲುತ್ತೇವೆ ಎಂದಿದ್ಧಾರೆ. ಈಗ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ್ ಅವರು ಯಡಿಯೂರಪ್ಪ ಪರವಾಗಿ ಸಹಾನುಭೂತಿ ತೋರಿದ್ದಾರೆ. ಮುಖ್ಯಮಂತ್ರಿಯಾದವರಿಗೆ ಕಾರ್ಯನಿರ್ವಹಿಸಲು ಸ್ವಾತಂತ್ರ್ಯ ಇರಬೇಕು. ಇಲ್ಲದಿದ್ದರೆ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ ಎಂದು ಎಸ್.ಆರ್.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.


ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ವರಿಷ್ಠರು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿಲ್ಲ. ಅವರ ಕೆಲಸಗಳಿಗೆ ಅಡೆತಡೆ ಮಾಡುತ್ತಿರಬೇಕು. ಅದಕ್ಕೆ ಅವರು ನೋವಿನಿಂದ ಹಾಗೆ ಮಾತನಾಡಿರಬಹುದು. ಬಿಜೆಪಿ ರಾಜ್ಯಾಧ್ಯಕ್ಷ  ಹಾಗೂ ಸಿಎಂ ಮಧ್ಯೆ ಮುಸುಕಿನ ಕಾಳಗವಿದೆ. ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್​ನ ಬೆಂಬಲವಿದೆ. ಅವರ ಮೂಲಕ ಯಡಿಯೂರಪ್ಪಗೆ ಮೂಗುದಾರ ಹಾಕುವ ಕೆಲಸ ನಡೆಯುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕರಾದ ಶಿವನಗೌಡ ರುದ್ರಗೌಡ ಪಾಟೀಲ ಹೇಳಿದ್ದಾರೆ. 


ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತೊರೆದು ಹೋದ ಅನರ್ಹ ಶಾಸಕರಿಗೆ ಒಳ್ಳೆಯದಾಗುವುದಿಲ್ಲ ಎಂದು ಎಸ್.ಆರ್. ಪಾಟೀಲ್ ಶಪಿಸಿದ್ದಾರೆ. ಅನರ್ಹ ಶಾಶಕರು ಒಂದು ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾದ ಬಳಿಕ ಮತ್ತೊಂದು ಪಕ್ಷದ ಸಿದ್ಧಾಂತ ಅಪ್ಪಿ ಹೋಗಿದ್ದಾರೆ. ಇವರನ್ನು ಮಾತೃಪಕ್ಷವಷ್ಟೇ ಅಲ್ಲ, ಅವರ ಕ್ಷೇತ್ರದ ಜನರೂ ಕ್ಷಮಿಸುವುದಿಲ್ಲ. ಅವರ ಜನರ ಅವಕೃಪೆಗೊಳಗಾಗಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ. ಅವರಿಂಗಂತೂ ಒಳ್ಳೆಯದಾಗುವುದಿಲ್ಲ ಎಂದು ಮಾಜಿ ಸಚಿವರೂ ಆಗಿರುವ ಎಸ್.ಆರ್. ಪಾಟೀಲ್ ತಿಳಿಸಿದ್ದಾರೆ.


ಅನರ್ಹರ ದಾರಿ ಬೇರೆ, ನಮ್ಮ ದಾರಿ ಬೇರೆ ಎಂದು ಬಿಜೆಪಿ ನಾಯಕ ಉಮೇಶ್ ಕತ್ತಿ ನೀಡಿದ ಹೇಳಿಕೆ ಪ್ರತಿಕ್ರಿಯಿಸಿದ ಎಸ್.ಆರ್. ಪಾಟೀಲ್, ಬಿಜೆಪಿಯಲ್ಲಿ ಆಂತರಿಕವಾಗಿ ಬಹಳಷ್ಟು ಭಿನ್ನಾಭಿಪ್ರಾಯ, ಮುಸುಕಿನ ಗುದ್ದಾಟ ಇದೆ. 15 ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಸ್ಪರ್ಧೆ ಮಾಡಿದರೆ ಕಾಂಗ್ರೆಸ್​ನವರು 12 ಸ್ಥಾನ ಗೆಲ್ಲಲಿದ್ದಾರೆ. ಉಪಚುನಾವಣೆಯ ಬಳಿಕ ಬಿಜೆಪಿ ಸರ್ಕಾರಕ್ಕೆ ಗಂಡಾಂತರ ಕಾದಿದೆ ಎಂದು ಎಚ್ಚರಿಕೆ ನೀಡಿದಾರೆ.


మరింత సమాచారం తెలుసుకోండి: