ಮೈಸೂರು : ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಇಂದು ಬೆಳಗ್ಗೆ ಆಯುಧ ಪೂಜೆಯ ಸಂಭ್ರಮ ಕಳೆಗಟ್ಟಿದೆ. ರಾಜರ ಯುದ್ಧ ಸಲಕರಣೆಗಳು, ಪಟ್ಟದ ಆನೆ, ಕುದುರೆಗಳಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಗೋಪಾಂಗವಾಗಿ ಪೂಜೆ ಸಲ್ಲಿಸಿದರು. ಮೊದಲು ಅರಮನೆಯ ಕೋಡಿ ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಾರಂಪರಿಕ ಆಯುಧಗಳನ್ನು ದೇವಾಲಯದಲ್ಲಿರಿಸಿ, ಅಲಂಕರಿಸಿ ರಾಜಪುರೋಹಿತರು ಎಲ್ಲರೂ ಪೂಜೆ ನೆರೆವೇರಿಸಿದ ಬಳಿಕ ಅವುಗಳನ್ನು ಮೆರೆವಣಿಗೆಗೆ ಕೊಂಡೊಯ್ಯಲಾಯಿತು. ಇದಾದ ಬಳಿಕ ಅರಮನೆಯಲ್ಲಿ ನಡೆದ ಚಂಡಿ ಹೋಮ ಪೂರ್ಣಾಹುತಿ ನಡೆಯಿತು. ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಕುದುರೆ ಪಟ್ಟದ ಆನೆ ಪಟ್ಟದ ಹಸು ಆಗಮಿಸಿ ಆಯುಧಗಳಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೂಜೆ ಮಾಡಿದರು.
 
ಸಿಂಹ ವಿಸರ್ಜನೆ ನಂತರ ಖಾಸ ದೇವರ ಮನೆಯಲ್ಲಿ ಯದುವೀರ್ ಒಡೆಯರ್ ಗೆ ಕಟ್ಟಲಾಗಿರುವ ಕಂಕಣ ವಿಸರ್ಜನೆ ಮಾಡಲಾಗುತ್ತದೆ. ವಾಣಿ ವಿಲಾಸ ದೇವರ ಮನೆಯಲ್ಲೂ ಕಂಕಣ ವಿಸರ್ಜನೆ ಮಾಡಲಾಗುತ್ತದೆ. ನಂತರ ಅಮಲ ದೇವತೆಯ ದರ್ಶನವಿರುತ್ತದೆ. ಇಂದು 5ನೇ ಬಾರಿಗೆ ಯದುವೀರ್ ಒಡೆಯರ್ ಆಯುಧಪೂಜೆ ನೆರವೇರಿಸಿದರು. ದ್ವಾಪರ ಯುಗದಲ್ಲಿ ಮಹಾಭಾರತದ ಸಮಯದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ, ತಮ್ಮ ಶಸ್ತ್ರಾಸ್ತ್ರಗಳನ್ನು ಶಮೀವೃಕ್ಷದಲ್ಲಿ ಅಡಗಿಸಿಟ್ಟಿದ್ದರು. ಅಜ್ಞಾತವಾಸ ಮುಗಿದ ನಂತರ ಶಸ್ತ್ರಾಸ್ತ್ರಗಳನ್ನು ಶಮೀವೃಕ್ಷದಿಂದ ಇಳಿಸಿ ಪೂಜಿಸಿದ್ದರು ಎಂಬುದು ಪ್ರತೀತಿ. ಆಗಿನಿಂದಲೂ ಆಯುಧ ಪೂಜೆಯನ್ನು ತಲೆತಲಾಂತರದಿಂದ ಮಾಡಿಕೊಂಡು ಬರಲಾಗುತ್ತಿದೆ. 


ಐತಿಹಾಸಿಕ ಜಂಬೂ ಸವಾರಿ : ಆಯುಧ ಪೂಜೆ ಮುಗಿದ ಮರುದಿನ ವಿಜಯದಶಮಿ. ಮೈಸೂರು ಈಗಾಗಲೆ ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಅಲಂಕರಿಸಿಕೊಂಡಿದೆ. ಚಿನ್ನದ ಅಂಬಾರಿಯನ್ನು ಹೊತ್ತ ಅರ್ಜುನ ಅರಮನೆಯಿಂದ ಬನ್ನಿಮಂಟಪದ ವರೆಗೆ ವಿಶ್ವ ವಿಖ್ಯಾತ ಜಂಬೂ ಸವಾರಿ ನಾಳೆ ನಡೆಯಲಿದೆ. ಇದನ್ನು ನೋಡಲು ದೂರದ ಊರು, ವಿದೇಶಗಳಿಂದಲೂ ಜನರು ಮೈಸೂರಿನಲ್ಲಿ ಹಾಜರಿದ್ದಾರೆ. ಈಗಾಗಲೇ ಲಕ್ಷಾಂತರ ಜನರು ಅರಮನೆಯ ವೀಕ್ಷಿಸುತ್ತಿದ್ದು, ನಾಳೆ ಜಂಬೂ ಸವಾರಿಗೆ  ಇನ್ನಷ್ಟು ಜನಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಪೋಲೀಸ್ ಇಲಾಖೆಯ ವತಿಯಿಂದ ಭದ್ರವಾದ ಸುವ್ಯವಸ್ಥಿತ ರೀತಿಯಲ್ಲಿ ಬಂದೋಬಸ್ತ್ ಮಾಡಿದ್ದಾರೆ.


మరింత సమాచారం తెలుసుకోండి: