ಬೆಂಗಳೂರು:  ಅತೃಪ್ತ ಅನರ್ಹ ಶಾಸಕ ವಿಶ್ವನಾಥ್​ ಮಾರಾಟವಾಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಅವರು ಬಿಜೆಪಿಗೆ ಹೋಗುತ್ತಿರುವುದು ಕೂಡ ಕ್ಷೇತ್ರದ ಮತದಾರರಿಗೆ ಗೊತ್ತು. ಈ ಬಗ್ಗೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಣೆ ಪ್ರಮಾಣದ ನಾಟಕವೆಲ್ಲಾ  ಬೇಕಾಗಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ ಹೇಳಿದರು. 


ಸಾರಾ ಮಹೇಶ್​- ವಿಶ್ವನಾಥ್​ ಆಣೆ ಪ್ರಮಾಣದ ಕುರಿತು ಮಾತನಾಡಿದ ಅವರು, ಕೆಲವರು ಆಣೆ ಪ್ರಮಾಣದ ಬಗ್ಗೆ ಹೊರನೋಟ ಇಲ್ಲದವರು. ಅವರಿಗೆ ದೇವರ ಬಗ್ಗೆ ನಂಬಿಕೆಯೇ ಇಲ್ಲ ಎಂದರು. ಹಿಂದೆ ಧರ್ಮಸ್ಥಳದಲ್ಲಿ ಇಂತದ್ದೇ ಡ್ರಾಮ ನಡೆದಿತ್ತು. ಯಡಿಯೂರಪ್ಪ, ನಾನು ದೇವಸ್ಥಾನಕ್ಕೆ ಹೋಗಿದ್ದೆವು. ಯಡಿಯೂರಪ್ಪ ದೇವರಿಗೆ ಕೈಮುಗಿದು ಹೋಗಿದ್ದರು. ಆದರೆ ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದೆ. ನಾನು ಹೇಳಿರುವುದು ಸತ್ಯ, ಸತ್ಯ, ಸತ್ಯ ಎಂದು 3 ಬಾರಿ ಹೇಳಿ ಪ್ರಮಾಣ ಮಾಡಿದ್ದೆ. ಅದಾದ ನಂತರ ಯಡಿಯೂರಪ್ಪ ಅಧಿಕಾರ ಬಿಡಬೇಕಾಯಿತು. ದೇಶದ ಸಂವಿಧಾನದಲ್ಲಿ ರಕ್ಷಣೆ ಪಡೆದುಕೊಂಡರು. ಆದರೆ ದೇವರಿಂದ ರಕ್ಷಣೆ ಪಡೆದುಕೊಳ್ಳೋಕೆ‌ ಆಗಿಲ್ಲ ಎಂದು ಯಡಿಯೂರಪ್ಪ ಬಗ್ಗೆ ಕಾಲೆಳದರು. 


ವಿಶ್ವನಾಥ್ ಬಗ್ಗೆ ಸಾ.ರಾ.ಮಹೇಶ್ ಹೇಳಿದ್ದು ನಿಜ. ಅವರು ಬಿಜೆಪಿಗೆ ಹೋಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಸಾರಾ ಮಹೇಶ್​​  ವಿಶ್ವನಾಥ್​ ಬಗ್ಗೆ ಚರ್ಚೆ ಮಾಡುವ ಅಗತ್ಯ ಇರಲಿಲ್ಲ. ಚಾಮುಂಡಿ ಬೆಟ್ಟದಲ್ಲಿ ನಡೆದ ಡ್ರಾಮ ಅಗತ್ಯ ಇರಲಿಲ್ಲ. ವಿಶ್ವನಾಥ್​ ಬಗ್ಗೆ  ಹುಣಸೂರಿನ ಜನರು ತೀರ್ಮಾನ ಮಾಡುತ್ತಾರೆ. ಆ ಮನುಷ್ಯನ ಬಗ್ಗೆ ಸಾ.ರಾ.ಮಹೇಶ್​ಗೂ ಗೊತ್ತಿದೆ. ಅವರು ಸತ್ಯ ಹರಿಶ್ಚಂದ್ರ ಅಂತ ತಿಳಿದುಕೊಂಡಿದ್ದಾರೆ. ತಾಯಿ ಸನ್ನಿಧಾನದಲ್ಲಿ ಹುಡುಗಾಟಿಕೆ ಮಾಡಿದ್ದು ತಪ್ಪು. ಇವತ್ತು ಚಾಮುಂಡಿ ಸನ್ನಿಧಿಯಲ್ಲಿ ಏನು ಆಗಿದೆಯೋ ಅದನ್ನು  ತಾಯಿ ಚಾಮುಂಡೇಶ್ವರಿ ತಾಯಿಯೇ ಅವರಿಗೆ ತೋರಿಸುತ್ತಾಳೆ ಎಂದರು. ಸಾರಾ ಮಹೇಶ್​​ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಧಾನಸಭಾಧ್ಯಕ್ಷರಿಗೆ ಸಾರಾ ಮಹೇಶ್​ ರಾಜೀನಾಮೆ ನೀಡಿರುವುದು ನಿಜ. ಈ ಬಗ್ಗೆ ನಾನು, ಸ್ಪೀಕರ್​ ಅವರ ಜೊತೆ ಈಗಾಗಲೇ ಮಾತನಾಡಿದ್ದೇನೆ. ನಾನು ಕೂಡ ಅವರಿಗೆ ಒತ್ತಾಯ ಹಾಕಿದ್ದೇನೆ. ಅವರು ರಾಜೀನಾಮೆ ವಾಪಸು ಪಡೆಯುತ್ತಾರೆ ಎಂದರು.


మరింత సమాచారం తెలుసుకోండి: