ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ರಾಜಕೀಯದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಇದೀಗ ವಿರೋಧ ಪಕ್ಷದ ನಾಯಕರಾದ ಮೇಲೆ ಸಿದ್ದರಾಮಯ್ಯ ಭಾನುವಾರ ತವರು ಜಿಲ್ಲೆ ಮೈಸೂರಿಗೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದರು. ಅದೇ ಹಳೆ ಖದರ್. ಅದೇ ಮಾತಿನ ಶೈಲಿ.ಸದನದ ಒಳಗೆ ವಿರೋಧಿಗಳ ಚಳಿ ಬಿಡಿಸ್ತಿದ್ದಂಥ ಸಿದ್ದರಾಮಯ್ಯ ಇವತ್ತು ಅದೇ ಖದರ್‌ನಲ್ಲಿ ಮೈಸೂರಿನಲ್ಲಿ ಕಾಣಿಸಿಕೊಂಡರು.


ವಿರೋಧ ಪಕ್ಷ ನಾಯಕನಾದ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಫ್ಲೆಕ್ಸ್‌, ಬ್ಯಾನರ್, ಹಾರ, ತುರಾಯಿ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಳೆ ಆರ್‌ಎಂಸಿ ವೃತ್ತದಿಂದ ತೆರೆದ ವಾಹನದಲ್ಲಿ ಕಾಂಗ್ರೆಸ್ ಕಚೇರಿವರೆಗೂ ಮೆರವಣಿಗೆ ಮೂಲಕ ಕರೆತಂದರು. ಸಿದ್ದರಾಮಯ್ಯ ಅಭಿಮಾನಿ 80 ವರ್ಷದ ವೃದ್ಧೆಯು ಮಸ್ತ್ ಸೂಪರ್ ಸ್ಟೆಪ್‌ ಹಾಕಿ ಡ್ಯಾನ್ಸ್ ಮಾಡಿದ್ದಾರೆ. 


ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿದ ಮಾತಾಡಿದ ಸಿದ್ದರಾಮಯ್ಯ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಗುಟುರು ಹಾಕಿದರು. ಮೋದಿ ಬಂದ ನಂತರ ದೇಶದ ಆರ್ಥಿಕತೆ ಶೇಕಡ 3.5ಕ್ಕೆ ಕುಸಿದಿದೆ. ಹಸಿವು ಹೆಚ್ಚಾಗಿರುವ ದೇಶಗಳ ಪೈಕಿ ಭಾರತ 102 ಸ್ಥಾನದಲ್ಲಿದೆ. ಹೀಗಿರುವಾಗ ಅಲ್ಲೆಲ್ಲೋ ಅಮೆರಿಕಾಕ್ಕೆ ಹೋಗಿ ಭಾರತ ಸಮೃದ್ಧಿಯಾಗಿದೆ ಅಂತ ಮೋದಿ ಹೇಳ್ತಾರೆ ಅಂತ ವಾಗ್ದಾಳಿ ನಡೆಸಿದರು. ಅದರಂತೆಯೇ ಮುಂದುವರಿದ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಗೂ ಹಿಟ್ಲರ್‌ಗೂ ವ್ಯತ್ಯಾಸ ಇಲ್ಲ. ಹಿಟ್ಲರ್‌ನಂತೆ ಒಂದೇ ಸುಳ್ಳನ್ನ ಪದೇ ಪದೇ ಹೇಳಿ ಜನರನ್ನ ನಂಬಿಸ್ತಾರೆ.

ಬಿಜೆಪಿ ಅಪಪ್ರಚಾರದಿಂದಲೇ ನಾವು ಸೋಲಾಬೇಕಾಯ್ತು ಎಂದು ಕಿಡಿಕಾರಿದರು. ಮೋದಿ, ಅಮಿತ್ ಶಾ ಮುಂದೆ ನಿಂತು ನೆರೆ ಪರಿಹಾರ ಕೇಳೋಕೆ ಯಡಿಯೂರಪ್ಪಗೆ ಧೈರ್ಯನೇ ಇಲ್ಲ ಎಂದು ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ. ಸಿದ್ದು ಅಷ್ಟೇ ಅಲ್ಲ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಕೇಂದ್ರದ ವಿರುದ್ಧ ಗುಡುಗಿದರು. ಸಿದ್ದರಾಮಯ್ಯ ವಿರುದ್ಧ ಮೋದಿ, ಅಮಿತ್ ಶಾ ಸಂಚು ಮಾಡ್ತಿದ್ದಾರೆ. ಆದರೆ, ಅವರನ್ನು ಮುಟ್ಟಿದರೆ ಬಿಜೆಪಿಗೆ ಗತಿ ಕಾಣಿಸ್ತೀವಿ ಎಂದು ಎಚ್ಚರಿಕೆ ನೀಡಿದರು.

మరింత సమాచారం తెలుసుకోండి: