ನವದೆಹಲಿ: ಪ್ರಸ್ತುತ ಅಯೋಧ್ಯೆ ತೀರ್ಪಿಗಾಗಿ ಇಡೀ ದೇಶವೇ ಸಾವಿರ ಕಣ್ಣುಗಳಿಂದ ಎದುರು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಈ ವಕೀಲರು ಇಡೀ ಅಯೋಧ್ಯೆ ಪ್ರದೇಶ ವೆಲ್ಲಾ ನಮಗೆ ಕೊಡಿ ಎಂದು ಕೇಳಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸುವ ಸಲುವಾಗಿ ವಿವಾದಿತ 2.77ಎಕರೆ ಭೂಮಿ ಹಾಗೂ ಸ್ವಾಧೀನಪಡಿಸಿಕೊಂಡಿರುವ ಇತರೆ ಜಾಗವನ್ನು ತಮಗೆ ನೀಡುವಂತೆ ಹಿಂದೂ ಕಕ್ಷಿದಾರರು ಸುಪ್ರೀಂ ಕೋರ್ಟ್‌ಗೆ  ಮನವಿ ಮಾಡಿದ್ದಾರೆ.

‘ಪುರಾತತ್ವ ಸಾಕ್ಷ್ಯಗಳ ಪ್ರಕಾರ, ವಿವಾದಿತ ಜಾಗದಲ್ಲಿ ರಾಮಮಂದಿರ ಇತ್ತು’ ಎಂದು ಪ್ರತಿಪಾದಿಸಿರುವ ರಾಮ್‌ಲಲ್ಲಾ ವಿರಾಜಮಾನ್, ‘ಮಸೀದಿಯನ್ನು ಮರು ನಿರ್ಮಿಸುವ ಮುಸ್ಲಿಂ ಕಕ್ಷಿದಾರರ ವಾದವು ನ್ಯಾಯ ಸಮ್ಮತವಲ್ಲ. ಅವರ ಕೋರಿಕೆಯು ಹಿಂದೂ ಧರ್ಮ, ಮುಸ್ಲಿಂ ಕಾನೂನು ಹಾಗೂ ನ್ಯಾಯ, ಸಮಾನತೆ, ಆತ್ಮಸಾಕ್ಷಿಗೆ ವಿರುದ್ಧವಾದುದು’ ಎಂದು ಪ್ರತಿಪಾದಿಸಿದೆ.  ‘ರಾಮನ ಜನ್ಮಸ್ಥಾನದಲ್ಲಿ ರಾಮಮಂದಿರ ಬಿಟ್ಟು ಬೇರೆ ಆಯ್ಕೆ ಇಲ್ಲ. ಹಾಗೇನಾದರೂ ಸೂಚಿಸಿದರೆ, ಅದು ದೇವರಿಗೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ’ ಎಂದು ವಕೀಲರಾದ ಕೆ. ಪರಾಶರನ್ ಹಾಗೂ ಸಿ.ಎಸ್. ವೈದ್ಯನಾಥನ್ ಅಭಿಪ್ರಾಯಪಟ್ಟಿದ್ದಾರೆ. ಖಾಲಿ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡಿರುವ ಮುಸ್ಲಿಂ ಕಕ್ಷಿದಾರರು ಯಾವುದೇ ಪರಿಹಾರ ಕೇಳಲುಅರ್ಹರಲ್ಲ. ವಿವಾದಿತ ಜಾಗದಲ್ಲಿ ಮಂದಿರದ ಕುರುಹುಗಳು ಪತ್ತೆಯಾಗಿವೆ’ ಎಂದು ಹಿಂದೂಕಕ್ಷಿದಾರರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ‘ಯಾವುದೇ ಕಾರಣಕ್ಕೂ ಪರಿಹಾರ ಸೂತ್ರ ಸೂಚಿಸುವುದಿಲ್ಲ.

ವಿವಾದಿತ ಜಾಗ ಸೇರಿದಂತೆ ಸ್ವಾಧೀನದಲ್ಲಿರುವ ಇಡೀ ಪ್ರದೇಶವನ್ನು ಹಿಂದೂಗಳ ಆಶಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುವುದು’ ಎಂದಿರುವ ಹಿಂದೂ ಕಕ್ಷಿದಾರರು, ಸಂಪೂರ್ಣ ನ್ಯಾಯ ಒದಗಿಸುವ ತೀರ್ಪುನೀಡುವಂತೆ ಕೇಳಿಕೊಂಡಿದ್ದಾರೆ. ಸುನ್ನಿ ವಕ್ಫ್ ಮಂಡಳಿ ಸೇರಿದಂತೆ ಮುಸ್ಲಿಂ ಕಕ್ಷಿದಾರರು ತಮ್ಮ ಪರಿಹಾರ ಸೂತ್ರವನ್ನು ಸಲ್ಲಿಸಿದ್ದರೂ, ಅದು ಮುಚ್ಚಿದ ಲಕೋಟೆಯಲ್ಲಿದೆ. ಒಂದು ವೇಳೆ ಮುಸ್ಲಿಮರ ಪರವಾಗಿ ತೀರ್ಪು ಪ್ರಕಟವಾದಲ್ಲಿ, ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕೆಲಸವನ್ನು ಮುಂದೂಡಬೇಕು ಎಂದು ಕೆಲವು ಮುಸ್ಲಿಂ ಅರ್ಜಿದಾರರು ಅಭಿಪ್ರಾಯಪಟ್ಟಿದ್ದಾರೆ. ‘ಶಾಂತಿ ಮತ್ತು ಕೋಮು ಸಾಮರಸ್ಯಕ್ಕೆ ಒತ್ತು ನೀಡುವುದು ನಮ್ಮ ಆದ್ಯತೆ. ತಕ್ಷಣ ಮಸೀದಿ ನಿರ್ಮಿಸುವ ಬದಲು ಸುತ್ತಲೂ ಕಾಂಪೌಂಡ್ ನಿರ್ಮಿಸುವುದು ಸೂಕ್ತ’ ಎಂದು ಅರ್ಜಿದಾರರಾದ ಹಾಜಿ ಮಹಬೂಬ್ ಹೇಳಿದ್ದಾರೆ. 


మరింత సమాచారం తెలుసుకోండి: