ಆಕ್ಲೆಂಡ್​: ನಗರದ ಈಡನ್​ ಪಾರ್ಕ್ ​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪ್ರಮುಖ ಬ್ಯಾಟಿಂಗ್ ಆಟಗಾರರ ವೈಫಲ್ಯದಿಂದ ಪ್ರವಾಸಿ ಭಾರತ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ಸುಲಭವಾಗಿ ಸೋಲಿಗೆ ಶರಣಾಯಿತು. ಈ ಮೂಲಕ ಏಕದಿನ ಸರಣಿಯನ್ನು ಕೈಚೆಲ್ಲಿತು. ಪಂದ್ಯದ ಕೊನೆಯವರೆಗೂ ಹೋರಾಟ ಮಾಡಿದ್ದು ಅದ್ಭುತವಾಗಿತ್ತು. 
 
ಕಿವೀಸ್​ ಪಡೆ ನೀಡಿದ್ದ 274 ರನ್​ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾಗೆ ಮಯಾಂಕ್​ ಅಗರ್ವಾಲ್​(3) ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ 24 ರನ್​ ಗಳಿಸಿದ್ದ ಪೃಥ್ವಿ ಶಾ ವಿಕೆಟ್​ ಒಪ್ಪಿಸಿದರೆ, 15 ರನ್​ ಗಳಿಸಿ ನಾಯಕ ವಿರಾಟ್​ ಕೊಹ್ಲಿ ನಿರಾಸೆ ಮೂಡಿಸಿದರು. ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಕೆ.ಎಲ್​.ರಾಹುಲ್​(4) ಕೂಡ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದೇ ಟೀಂ ಇಂಡಿಯಾಗೆ ಮುಳುವಾಯಿತು. ಹೌದು, ಪ್ರಮುಖ ಬ್ಯಾಟ್ಸ್ ಮನ್ ಗಳ ಬ್ಯಾಕ್ ಟೂ ಬ್ಯಾಕ್ ವಿಕೆಟ್ ತಂಡದ ಸೋಲಿಗೆ ಕಾರಣವಾಯಿತು. 
 
ತಂಡದ ಮೊತ್ತ 74 ರನ್​ ಆಗಿದ್ದಾಗಲೇ ಟೀಮ್​ ಇಂಡಿಯಾ ಪ್ರಮುಖ 4 ವಿಕೆಟ್​ಗಳನ್ನು ಕಡೆದುಕೊಂಡು ಸೋಲಿನ ದವಡೆಗೆ ಸಿಲುಕಿತು. ಬಳಿಕ ಬಂದ ಕೇದರ್​ ಜಾಧವ್(9) ಕೂಡ ಭರವಸೆ ಮೂಡಿಸಲಿಲ್ಲ. ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಶ್ರೇಯಸ್​ ಅಯ್ಯರ್​(52) ತಂಡದ ಮೊತ್ತವನ್ನು 100ರ ಗಡಿ ದಾಟಿಸಿ, ಅರ್ಧಶತಕ ದಾಖಲಿಸಿ ಹೊರ ನಡೆದರು. ಶಾರ್ದೂಲ್​ ಠಾಕೂರ್​(18) ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿದರು. ಕೊನೆಯಲ್ಲಿ ಟೀಮ್​ ಇಂಡಿಯಾಕ್ಕೆ ಆಸರೆಯಾದ ರವೀಂದ್ರ ಜಡೇಜಾ ಮತ್ತು ನವದೀಪ್​ ಸೈನಿ ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು 200 ಗಡಿ ದಾಟಿಸಿ ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು. ಈ ಹಂತದಲ್ಲಿ 45 ರನ್​ ಗಳಿಸಿದ್ದ ನವದೀಪ್​ ಸೈನಿ ಔಟಾದರೂ. ಜಡೇಜಾ 55 ರನ್ ಗಳಿಸಿದರು. 
 
ಅಂತಿಮವಾಗಿ ಟೀಮ್​ ಇಂಡಿಯಾ 48.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 251 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ 2-0 ಅಂತರದಿಂದ ಸರಣಿಯಲ್ಲಿ ಸೋಲುಂಡಿತು.

మరింత సమాచారం తెలుసుకోండి: