ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕಳೆದೆರಡು ದಶಕಗಳ ಹಿಂದೆ ಪಟೆಪಟನೆ ಮಾತನಾಡುತ್ತ ಕಾಮಿಡಿ ಮಾಡುತ್ತಾ ಭಾರೀ ಸುದ್ದಿಯಾಗುತ್ತಿದ್ದ ಹಿರಿಯ ನಟಿ ಉಮಾಶ್ರೀ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಇಷ್ಟು ದಿನ ರಾಜಕೀಯ ರಂಗದಲ್ಲಿ ಬಿಝಿಯಾಗಿದ್ದ ಅವರೀಗ ನಟನೆಯತ್ತ ವಾಲಿದ್ದಾರೆ. ಬಹಳ ಗ್ಯಾಪ್‌ ಬಳಿಕ ಉಮಾಶ್ರೀ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. 
 
ಕಿರುತೆರೆಯ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಅಮ್ಮನ ಪಾತ್ರ ನಿರ್ವಹಿಸುತ್ತಿರುವ ಉಮಾಶ್ರೀ, ಈಗ ಬರುತ್ತಿರುವ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರು ರಂಗಭೂಮಿಯಲ್ಲೂ ಸಕ್ರಿಯರಾಗುತ್ತಿದ್ದು, ಏಕಪಾತ್ರಾಭಿನಯ ಇರುವ ನಾಟಕವೊಂದರಲ್ಲಿ ನಟಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಸ್ಕ್ರಿಪ್ಟ್ ಕೂಡ ನಡೆಯುತ್ತಿದೆ ಎಂಬುದು ಅವರ ಮಾತು. ಇಷ್ಟು ದಿನಗಳ ಕಾಲ ರಾಜಕೀಯದಲ್ಲಿ ಬಿಝಿಯಾಗಿದ್ದ ಅವರಿಗೆ ನಟಿಸುವ ಅವಕಾಶ ಬಂದಿದ್ದರೂ, ನಿರಾಕರಿಸಿದ್ದರು. ಕಾರಣ, ಸಿನಿಮಾ ಒಪ್ಪಿಕೊಂಡು ಹೇಳಿದ ಸಮಯಕ್ಕೆ ಹೋಗದಿದ್ದರೆ, ನಿರ್ಮಾಣ ಸಂಸ್ಥೆಗೆ ಸಮಸ್ಯೆಯಾಗುತ್ತೆ, ಉಳಿದ ಕಲಾವಿದರಿಗೂ ತೊಂದರೆ ಆಗುತ್ತೆ ಎಂಬ ಕಾರಣಕ್ಕೆ ಅವರು ಒಪ್ಪಿರಲಿಲ್ಲವಂತೆ. ಈಗ ನಟನೆಯತ್ತ ತಮ್ಮ ಚಿತ್ತ ಹರಿಸಿದ್ದು, ಕಿರುತೆರೆ ಮೂಲಕ ನಟನೆಯ ಪಯಣ ಪುನಹ ಪ್ರಾರಂಭಿಸಿದ್ದಾರೆ. 
 
“ನಟನೆ ನನ್ನುಸಿರು’ ಒಳ್ಳೆಯ ಪಾತ್ರ, ಕಥೆ ಸಿಕ್ಕರೆ, ಹಿರಿತೆರೆ, ಕಿರುತೆರೆ ಯಾವುದೇ ಇರಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ರಾಜಕೀಯ ರಂಗದಲ್ಲಿರುವಾಗಲೇ ಒಂದಷ್ಟು ಅವಕಾಶ ಬಂದಿದ್ದುಂಟು. ಆದರೆ, ಸರ್ಕಾರದ ಕೆಲಸದ ಒತ್ತಡದಿಂದಾಗಿ ನಟಿಸಲು ಸಾಧ್ಯವಾಗಿರಲಿಲ್ಲವಂತೆ. ಈ ಹಿಂದೆ ಕೂಡ ಉಮಾಶ್ರೀ ಅವರು, “ಅಮ್ಮ’ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಪುನಃ ಕಿರುತರೆ ಪ್ರವೇಶಿಸಿದ್ದಾರೆ. ಜೊತೆಗೆ ವಾಹಿನಿಯೊಂದರಲ್ಲಿ ಮಕ್ಕಳ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಳ್ಳುತ್ತಿದ್ದಾರಂತೆ. ಇಷ್ಟು ದಿನ ರಾಜಕೀಯದ ಕೆಲಸಗಳ ನಡುವೆ ಅವರು ಸಿನಿಮಾ, ರಂಗಭೂಮಿಯಿಂದ ತುಸು ದೂರವಿದ್ದರು. ಅಷ್ಟೇ ಅಲ್ಲ, ಮನೆ, ಮಕ್ಕಳು, ಮೊಮ್ಮಕ್ಕಳ ಜೊತೆಗೂ ಕಾಲ ಕಳೆಯಲು ಸಮಯ ಸಿಕ್ಕಿರಲಿಲ್ಲ. ಈಗ ಅವರು, ನಟನೆಯ ಜೊತೆ ಜೊತೆಗೆ ಮನೆ, ಮಕ್ಕಳು, ಮೊಮ್ಮಕ್ಕಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರಂತೆ. ಅದೇನೆ ಇರಲಿ, ಪುಟ್ಮಲ್ಲಿ ಎಂದೇ ಕರೆಸಿಕೊಳ್ಳುವ ಉಮಾಶ್ರೀ ಅವರೀಗ ನಟನೆಯತ್ತ ಗಮನಹರಿಸಿರುವುದು ಅಭಿಮಾನಿಗಳಿಗೆ ಇನ್ನಿಲ್ಲದ ಸಂತಸ ತಂದಿದೆ.

మరింత సమాచారం తెలుసుకోండి: